ಡಾಲಿ ಧನಂಜಯ್ ಅವರ ಹೊಸ ಸಿನಿಮಾ ‘ಹೆಡ್ ಬುಷ್’ ಎಲ್ಲೆಡೆ ಸುದ್ದಿಯಲ್ಲಿದೆ. ವಿಭಿನ್ನ ರೀತಿಯ ಪ್ರಚಾರದಿಂದ ಗಮನ ಸೆಳೆಯುತ್ತಿರುವ ಈ ಸಿನಿಮಾದಲ್ಲಿ ನಟಿ ಶ್ರುತಿ ಹರಿಹರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಈಗ ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಅಂದ ಹಾಗೆ ಬರೋಬ್ಬರಿ ಮೂರು ವರ್ಷಗಳ ನಂತರ ಶೃತಿ ಹರಿಹರನ್ ತೆರೆ ಮೇಲೆ ಬರುತ್ತಿದ್ದಾರೆ.

ಪ್ರತಿಭಾವಂತ ನಟಿಯರ ಪೈಕಿ ಶ್ರುತಿ ಹರಿಹರನ್ ಕೂಡ ಒಬ್ಬರು. ಮದುವೆ, ಮಗು ಎಂದು ಒಂದಷ್ಟು ಸಮಯದಿಂದ ಚಿತ್ರರಂಗದಿಂದ ಶೃತಿ ದೂರ ಉಳಿದಿದ್ದರು. ಕಳೆದ ವರ್ಷ ಹೊಸದೊಂದು ಸಿನಿಮಾದ ಮೂಲಕ ನಟನೆಗೆ ಮರಳಿದರು. ಅದಾದ ಬಳಿಕ ‘ಹೆಡ್ ಬುಷ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಈಗ ಆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಈ ಕುರಿತಂತೆ ಮಾತನಾಡಿದ ನಟಿ ‘ನಿಜ ಜೀವನದ ಒಂದು ಪಾತ್ರವನ್ನು ನಿರ್ವಹಿಸಿದ್ದು, ನನ್ನ ಜೀವನದ ವಿಶೇಷ ಅನುಭವಗಳಲ್ಲಿ ಒಂದು. ಅಲ್ಲದೇ ಮೂರು ವರ್ಷಗಳ ನಂತರ ನಾನು ನಟಿಸಿರುವ ಸಿನಿಮಾವೊಂದು ತೆರೆ ಮೇಲೆ ಬರುತ್ತಿದೆ. ಈ ಮೂರು ವರ್ಷಗಳಲ್ಲಿ ನನ್ನೊಳಗೆ ಬಹಳಷ್ಟು ಬದಲಾವಣೆಗಳಾಗಿವೆ. ಮಗಳು ಬಂದಳು, ಇದರಿಂದ ನನ್ನ ರೂಪವೂ ಕೊಂಚ ಬದಲಾಗಿದೆ. ಹಾಗಾಗಿ ನನಗೆ ಈ ಸಿನಿಮಾ ಒಂದು ದೊಡ್ಡ ಎಕ್ಸೈಟ್ಮೆಂಟ್ ಜತೆಗೆ ಭಯವೂ ಹೌದು. ನನ್ನ ಮೊದಲ ಸಿನಿಮಾ ಬಿಡುಗಡೆಯಾಗಬೇಕಾದರೆ ನನಗೆ ಈ ರೀತಿಯ ಭಯ ಆಗುತ್ತಿತ್ತು’ ಎಂದರು.

ಮುಂದುವರೆಸಿ ‘ಧನಂಜಯ ಅವರು ಕರೆ ಮಾಡಿ ನನ್ನ ಬ್ಯಾನರ್ನಲ್ಲಿ ಈ ಸಿನಿಮಾ ಮಾಡುತ್ತಿದ್ದೇನೆ. ಒಮ್ಮೆ ಕಥೆ ಕೇಳಿ ಎಂದರು. ನಿಮ್ಮ ಬ್ಯಾನರ್ ಎಂದ ಮೇಲೆ ಕಥೆ ಕೇಳುವ ಅವಶ್ಯಕತೆ ಇಲ್ಲ ಎಂದೆ. ಆದರೂ ಅಗ್ನಿ ಶ್ರೀಧರ್ ಅವರ ಮನೆಗೆ ಹೋಗಿ ಕಥೆ ಕೇಳಿದೆ. ಶ್ರೀಧರ್ ಅವರು ಕಥೆಯನ್ನು ನಿರೂಪಣೆ ಮಾಡುವಾಗ, ಪಾತ್ರಗಳ ಬಗ್ಗೆ ಬಹಳ ಸೂಕ್ಷ್ಮವಾಗಿ ಹೇಳುತ್ತಿದ್ದರು” ಎನ್ನುತ್ತಾರೆ

ಇದರ ಜೊತೆಗೆ “ನನಗೆ ರತ್ನಪ್ರಭಾ ಎನ್ನುವ ಕ್ಯಾರೆಕ್ಟರ್ ಬಹಳ ಇಷ್ಟವಾಯಿತು. ಆ ಪಾತ್ರವನ್ನು ನಿರ್ವಹಿಸುವುದು ನನಗೆ ದೊಡ್ಡಮಟ್ಟದ ಚಾಲೆಂಜ್ ಎನಿಸಿತು. ಕಥೆ ಕೇಳಿದ ಮೇಲೆ ರತ್ನಪ್ರಭಾ ಅವರ ಬಗ್ಗೆ ತಿಳಿಯಲು ನಾನು ಗೂಗಲ್ ಮಾಡಿ ನೋಡಿದೆ. ರಾಜಕೀಯ ರಂಗದಲ್ಲಿ ಆಕೆ ಎಂತಹ ಪ್ರಭಾವಿ ಮಹಿಳೆಯಾಗಿದ್ದರು ಎಂಬುದು ತಿಳಿಯಿತು. ಬಹಳ ದಿನಗಳ ಮೇಲೆ ತೆರೆ ಮೇಲೆ ಬರುತ್ತಿದ್ದರೂ, ಅದ್ಭುತ ಪಾತ್ರದ ಮೂಲಕ ಬರುತ್ತಿದ್ದೇನೆ ಎಂಬ ಖುಷಿ ನನಗಿದೆ’ ಎನ್ನುತ್ತಾರೆ ಶ್ರುತಿ ಹರಿಹರನ್.

ಈ ಸಿನಿಮಾವನ್ನು ಕಂಪ್ಲೀಟ್ ರೆಟ್ರೋ ಸ್ಟೈಲ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ರತ್ನಪ್ರಭಾ ಅವರ ಪಾತ್ರಕ್ಕೆ ಶಚಿನಾ ಹೆಗ್ಗಾರ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ‘ಹೆಡ್ ಬುಷ್’ ಸಿನೆಮಾ ಮೇಲೆ ಎಲ್ಲರಿಗೂ ಬಹಳಷ್ಟು ನಿರೀಕ್ಷೆ ಇದೆ. ಇದರಲ್ಲಿ ಅಂಡರ್ವರ್ಲ್ಡ್ ಅನ್ನು ಪಾಸಿಟಿವ್ ಆಗಿ ತೋರಿಸಿಲ್ಲ. ಬದಲಿಗೆ ಆಗಿನ ರಾಜಕೀಯ ಮತ್ತು ನೈಜ ಘಟನೆಗಳನ್ನು ವಿವರಿಸಲಾಗಿದೆ.

70-80ರ ದಶಕದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಅಗ್ನಿ ಶ್ರೀಧರ್ ‘ಮೈ ಡೇಸ್ ಇನ್ ದ ಅಂಡರ್ವರ್ಲ್ಡ್’ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕವೇ ಈಗ ‘ಹೆಡ್ ಬುಷ್’ ಸಿನಿಮಾವಾಗಿದೆ. ನಟ ಧನಂಜಯ್ ಜಯರಾಜ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ