‘ರಿಷಭಪ್ರಿಯ’ ಎಂಬ ಕಿರುಚಿತ್ರದ ಮೂಳಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ರಾಗಿಣಿ ಚಂದ್ರನ್ ನಂತರ ‘ಲಾ’ ಸಿನಿಮಾದ ಮೂಲಕ ನಾಯಕಿಯಾಗಿಯೂ ಗುರುತಿಸಿಕೊಂಡ ಚೆಲುವೆ. ಜೊತೆಗೆ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್ಪೆಕ್ಟರ್ ವಿಕ್ರಂ’ ಸಿನಿಮಾದಲ್ಲಿ ಅತಿಥಿ ಪಾತ್ರವನ್ನೂ ಮಾಡಿ ಸೈ ಎನಿಸಿಕೊಂಡಿದ್ದರು. ಇದರ ಜೊತೆಗೆ ಅವರು ಮತ್ತೊಂದು ಸಿನಿಮಾಗೆ ಸೆಲೆಕ್ಟ್ ಆಗಿದ್ದಾರೆ.

ಹೌದು, ಇದೀಗ ಮತ್ತೊಮ್ಮೆ ಹೊಸ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ ರಾಗಿಣಿ. ಭುವನ್ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಶಾನುಭೋಗರ ಮಗಳು’ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸುತ್ತಿದ್ದಾರೆ.

ಸ್ಯಾಂಡಲ್ವುಡ್ಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಕೋಡ್ಲು ರಾಮಕೃಷ್ಣ ಈ ಚಿತ್ರದ ನಿರ್ದೇಶಕರು. ಈ ಹಿಂದೆ ‘ಮಿ. ಡೂಪ್ಲಿಕೇಟ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಅದರಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದರು. ಇದೀಗ ಅವರ ಪತ್ನಿ ರಾಗಿಣಿ ನಾಯಕಿಯಾಗಿರುವ ಸಿನಿಮಾಗೆ ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡುತ್ತಿರುವುದು ವಿಶೇಷ.

ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಕೋಡ್ಲು ರಾಮಕೃಷ್ಣ ಕೂಡ ಒಬ್ಬರು. ಈಗ ಮತ್ತೊಮ್ಮೆ ಶಾನು ಭೋಗರ ಮಗಳು ಸಿನಿಮಾದ ಮೂಲಕ ಕಾದಂಬರಿ ಆಧಾರಿತ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಭಾಗ್ಯ ಕೃಷ್ಣಮೂರ್ತಿಯವರು ಬರೆದಿರುವ ಕಾದಂಬರಿಯನ್ನಾಧರಿಸಿ ‘ಶಾನುಭೋಗರ ಮಗಳು’ ಸಿನಿಮಾ ತಯಾರಾಗುತ್ತಿದೆ. ಸ್ವಾತಂತ್ರಪೂರ್ವದ ಕಥೆಯನ್ನು ಕಟ್ಟಿಕೊಡಲು ಹೊರಟಿದೆ ಈ ಸಿನಿಮಾ.

ಇನ್ನು ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬಿ.ಎ. ಮಧು ಬರೆಯುತ್ತಿದ್ದಾರೆ. ಈ ಚಿತ್ರಕ್ಕೆ ಜೈ ಆನಂದ್ ಅವರ ಛಾಯಾಗ್ರಹಣವಿದ್ದು, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕಲಾ ನಿರ್ದೇಶನದ ಜವಾಬ್ದಾರಿ ವಸಂತ್ ರಾವ್ ಕುಲಕರ್ಣಿಯವರದ್ದು. ಉಳಿದಂತೆ ಮೇಘಶ್ರೀ, ನಿರಂಜನ್ ಕುಮಾರ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಶಂಕರ್ ಅಶ್ವತ್ಥ್ , ನೀನಾಸಂ ಅಶ್ವತ್ಥ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಪ್ರಮುಖ ಪಾತ್ರವಾಗಿದ್ದು, ಆ ಪಾತ್ರಕ್ಕಾಗಿ ಕಲಾವಿದನ ಆಯ್ಕೆ ಕಾರ್ಯ ನಡೆಯುತ್ತಿದೆ. ಸೆಪ್ಟೆಂಬರ್ ಕೊನೆಯ ವಾರದಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅತ್ಯುತ್ತಮ ನೃತ್ಯಗಾರ್ತಿ. ‘ಲಾ’ದಂತಹ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದ ರಾಗಿಣಿ, ಈ ಬಾರಿ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಸ್ಯಾಂಡಲ್ವುಡ್ ಗೆ ಮರಳಿರುವುದು ವಿಶೇಷ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ